ADVERTISEMENT

'ಟೀನೇಜ್' ರಂಗೀಲಾ

'ಟೀನೇಜ್' ರಂಗೀಲಾ
ವಿಮರ್ಶಕರ ರೇಟಿಂಗ್ :  
ಪಾತ್ರವರ್ಗ: ಕಿಶನ್, ಅಪೂರ್ವ, ತನ್ವಿ, ಪ್ರಿಯಾ, ಜಯಶ್ರೀ, ರಾಜುತಾಳಿಕೋಟೆ, ಮಾಸ್ಟರ್ ಲಕ್ಷ್ಮಣ್, ಮಾಸ್ಟರ್ ಸಾಯಿಕೃಷ್ಣ
ನಿರ್ದೇಶನ: ಶ್ರೀಕಾಂತ್‌
ಓದುಗರ ರೇಟಿಂಗ್ :
ಕನ್ನಡ ಚಿತ್ರ : ಟೀನೇಜ್

ಕಲರ್‌ಫುಲ್ ಟೀನೇಜ್ ಏನೋ ಒಂಥರಾ ಅನಿಸಿದರೂ, ಇದನ್ನು ಹಿಡಿದಿಡುವುದು ಕಷ್ಟ. ಒಂದು ರೀತಿಯಲ್ಲಿ ಇದನ್ನು ಮರೀಚಿಕೆ ಎನ್ನಬಹುದು. ಇದರ ಬೆನ್ನಹತ್ತಿ ಹೋಗಿರುವ ನಿರ್ದೇಶಕ ಶ್ರೀಕಾಂತ್, ಟೀನೇಜ್ ಚಿತ್ರವನ್ನು ಕಲರ್‌ಫುಲ್ ಆಗಿ ಕಟ್ಟಿಕೊಟ್ಟಿದ್ದಾರೆ. ಆದರೆ, ಈ ವಯಸ್ಸಿನ ಹುಡುಗರ ಬಯಕೆ ಏನೆಂಬುದನ್ನು ಅರಿಯದೆ ಅಚ್ಚರಿ ಮೂಡಿಸುತ್ತಾರೆ.

ಸಾಮಾನ್ಯವಾಗಿ ಟೀನೇಜ್ ಹುಡುಗರ ಬಯಕೆಗಳೇ ಬೇರೆ. ಫುಲ್ ಕನ್‌ಫ್ಯೂಶನ್. ಬಾಲ್ಯ ಕಳೆದು ಹರೆಯ ಮೂಡುವ ವಯಸ್ಸದು. ಸಿಕ್ಕಿದ್ದೆಲ್ಲ ಬೇಕು ಅನ್ನುವ ಬಯಕೆ. ಇಂಥ ಹುಡುಗರ ತುಮುಲಗಳ ಜತೆಗೆ ತಂಗಿ ಮತ್ತು ಅಣ್ಣನ ಸೆಂಟಿಮೆಂಟ್ ಕಟ್ಟಿಕೊಡುವ ಪ್ರಯತ್ನ ಚಿತ್ರದಲ್ಲಿ ಆಗಿದೆ. ಹೀಗಾಗಿ, ಟೀನೇಜ್ ಹುಡುಗರಿಗೆ ಲಂಗು ಲಗಾಮು ಇಲ್ಲ ಅನ್ನುವ ಕೆಲವು ಚಿತ್ರಗಳಿಗೆ, ಅವರಲ್ಲೂ ಭಾವನೆಗಳು ಉಂಟು ಎಂಬ ಉತ್ತರ ಕೊಟ್ಟಂತಿದೆ ಚಿತ್ರ.

ಈ ವಯಸ್ಸಿನ ಹುಡುಗರ ಕತೆಗಳು ಹಾಲಿವುಡ್‌ನಲ್ಲಷ್ಟೇ ಅಲ್ಲ, ಕನ್ನಡದಲ್ಲೂ ಬಂದಿವೆ. ಅವುಗಳಲ್ಲಿ ಬಹುತೇಕ ಸಿನಿಮಾಗಳು ಹಸಿ ಬಿಸಿ ಕಾಮನೆಗಳನ್ನು ಹಿಡಿದಿಟ್ಟಿವೆ. ಡಬ್ಬಲ್ ಮೀನಿಂಗ್ ಸಂಭಾಷಣೆಗಳಿಂದ ತುಂಬಿ ಹೋಗಿವೆ. ಅವುಗಳಿಂದ ಈ ಸಿನಿಮಾ ಹೊರತಾಗಿದೆ. ಸಿನಿಮಾಟೋಗ್ರಫಿ ಮತ್ತು ಸಂಕಲನ ಎರಡೂ ಒಂದೇ ವೇಗದಲ್ಲಿ ಸಾಗಿರುವುದರಿಂದ ಇಡೀ ಚಿತ್ರ ಬಣ್ಣದಲ್ಲಿ ಅದ್ದಿ ತೆಗೆದಂತಿದೆ. ಬಣ್ಣಗಳ ಜತೆಗೆ ಸಾಕಷ್ಟು ಆಟ ಆಡಿದ್ದಾರೆ ಸಿನಿಮಾಟೋಗ್ರಾಫರ್. ಈ ಹೊತ್ತಿನ ಟೀನೇಜ್ ಹುಡುಗರಿಗೆ ಇಷ್ಟೇ ಸಾಕಾ? ಈ ಪ್ರಶ್ನೆಯನ್ನು ಹಾಕಿಕೊಳ್ಳದೆ ನಿರ್ದೇಶಕರು ಸಿನಿಮಾ ಮಾಡಿರುವುದರಿಂದ, ಅಲ್ಲಲ್ಲಿ ಕತೆಯ ವೇಗಕ್ಕೆ ಬ್ರೇಕ್ ಬೀಳುತ್ತಲೇ ಇರುತ್ತದೆ.

ಮಾಸ್ಟರ್ ಕಿಶನ್‌ಗೆ 'ಮಿಸ್ಟರ್ ಕಿಶನ್' ಪಟ್ಟ ಕಟ್ಟಿಕೊಡುವುದಕ್ಕಾಗಿ ಹಲವು ಕಡೆ ಪ್ರೇಕ್ಷಕರನ್ನೇ ಮರೆತುಬಿಡುತ್ತಾರೆ ನಿರ್ದೇಶಕರು. ಕತೆಯೊಂದಕ್ಕೆ ಪರಿಸರ ಮತ್ತು ಪರಿಣಾಮ ಇರುತ್ತದೆ ಎಂಬುದನ್ನು ಪರಿಗಣಿಸಿದೆ, ಹೀರೋಯಿಸಂ ತಲೆಯಲ್ಲಿಟ್ಟುಕೊಂಡು ಸಿನಿಮಾ ಮಾಡಿದ್ದಾರೆ. ಹಾಗಾಗಿ ಕಿಶನ್ ನಟನೆ ಎದೆಯಾಳಕ್ಕೆ ಇಳಿಯುವಲ್ಲಿ ಕೊಂಚ ಜರ್ಕ್ ಹೊಡೆಯುತ್ತದೆ. ಉಳಿದಂತೆ ನಾಯಕಿಯರ ಜತೆಗಿನ ಸರಸ, ಹಾಡು ಮತ್ತು ಕುಣಿತದಲ್ಲಿ ಗಮನ ಸೆಳೆಯುತ್ತಾರೆ.

ನಗಿಸುವುದಕ್ಕಾಗಿ ಸೃಷ್ಟಿಯಾದ ದೃಶ್ಯಗಳು, ಮಕ್ಕಳ ಮಾತುಗಳು, ರಾಜು ತಾಳಿಕೋಟೆ ಅವರ ನಿರೂಪಣೆ ಸಿನಿಮಾಗೆ ಸಹಾಯ ಮಾಡಿಲ್ಲ. ಇವುಗಳೇ ಸಾಕಷ್ಟು ಕಡೆ ಕಿರಿಕಿರಿಯನ್ನುಂಟು ಮಾಡುತ್ತವೆ. ಅನಗತ್ಯವಾದ ಸಾಕಷ್ಟು ಮಾತುಗಳನ್ನು ತುಂಡರಿಸಿದರೆ, ಟೀನೇಜ್ ಹುಡುಗರಿಗೆ ಮತ್ತಷ್ಟು ಹತ್ತಿರವಾಗಬಹುದಾದ ಸಿನಿಮಾ.

ಹೇಳಿಕೊಳ್ಳುವಂತಹ ಕತೆ ಇಲ್ಲದಿದ್ದರೂ, ಮೇಕಿಂಗ್ ಕಾರಣಕ್ಕಾಗಿ ಇಷ್ಟವಾಗುತ್ತದೆ. ಅಪೂರ್ವ, ತನ್ವಿ, ಪ್ರಿಯಾ ಮುದ್ದು ಮುದ್ದಾಗಿ ಕಾಣುತ್ತಾರೆ. ಜಯಶ್ರೀ ಅಚ್ಚುಕಟ್ಟಾಗಿ ಪಾತ್ರ ನಿಭಾಯಿಸಿದ್ದಾರೆ. ಸಿದ್ದಾರ್ಥ್ ವಿಪಿನ್ ಸಂಗೀತವು ಸಾಹಿತ್ಯವನ್ನೇ ನುಂಗಿಹಾಕಿದೆ. ಮುರಳಿ, ರಾಮು, ಚಂದ್ರಮಯೂರ್, ಶಂಕರ್ ನೃತ್ಯ ನಿರ್ದೇಶನ ಗಮನ ಸೆಳೆಯುತ್ತವೆ. ಇಡೀ ಚಿತ್ರವು ಹಲವು ಟ್ರ್ಯಾಕ್‌ಗಳಲ್ಲಿ ಹಂಚಿ ಹೋಗಿದೆ. ಕೇವಲ ಟೀನೇಜ್ ಹುಡುಗರನ್ನಷ್ಟೇ ಕೇಂದ್ರೀಕರಿಸಿ ಚಿತ್ರ ಮಾಡಿದ್ದರೆ, ಎಲ್ಲರ ಶ್ರಮವೂ ದಾಖಲಾಗಿರುತ್ತಿತ್ತು.
ಲೇಖನಕ್ಕೆ ಅನಿಸಿಕೆಗಳಿವೆ.ಬೇರೆ ಓದುಗರ ಅನಿಸಿಕೆಗಳನ್ನು ಓದಿಮತ್ತುನಿಮ್ಮ  ಅನಿಸಿಕೆಗಳನ್ನು ಬರೆಯಿರಿ.
ಇವುಗಳೂ ನಿಮಗಿಷ್ಟವಾಗಬಹುದು
 
ಇದನ್ನು ಟ್ವೀಟ್ ಮಾಡಿ.
About Us | Advertise with Us | Careers @ TIL | Terms of Use and Grievance Redressal Policy | Privacy Policy | Sitemap
Copyright © 2013 Times Internet Limited. All rights reserved. For reprint rights: Times Syndication Service
This site is best viewed with Internet Explorer 7.0 or higher; Firefox 2.0 or higher at a minimum screen resolution of 1024x768