ADVERTISEMENT
ನೀವಿಲ್ಲಿದ್ದೀರಿ: ವಿಜಯ ಕರ್ನಾಟಕ  » ಕರ್ನಾಟಕ » ಕರ್ನಾಟಕ

‘ಕ್ಷೀರಭಾಗ್ಯ’ದಿಂದ ಅಪೌಷ್ಟಿಕತೆ ಪ್ರಮಾಣ ಇಳಿಮುಖ: ಸಿಎಂ

‘ಕ್ಷೀರಭಾಗ್ಯ’ದಿಂದ  ಅಪೌಷ್ಟಿಕತೆ ಪ್ರಮಾಣ ಇಳಿಮುಖ: ಸಿಎಂ
ಬೆಂಗಳೂರು: ಗ್ರಾಮೀಣ ಭಾಗದ ಮಕ್ಕಳಲ್ಲಿನ ಅಪೌಷ್ಟಿಕತೆ ನಿವಾರಣೆಗೆ ಕ್ಷೀರಭಾಗ್ಯ ಯೋಜನೆ ಸಹಕಾರಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಕರ್ನಾಟಕ ಹಾಲು ಮಹಾಮಂಡಲ ಹೊಸಕೋಟೆಯ ಚನ್ನಭೈರೇಗೌಡ ಕ್ರೀಡಾಂಗಣದಲ್ಲಿ ಗುರುವಾರ ಹಮ್ಮಿಕೊಂಡಿದ್ದ 'ಕ್ಷೀರಭಾಗ್ಯ' ಯೋಜನೆಗೆ ಚಾಲನೆ ನೀಡಿ ಮಾತನಾಡಿದರು.

''ಅಪೌಷ್ಟಿಕತೆಯಿಂದ ಬಳಲುವ ಮಕ್ಕಳ ಸಂಖ್ಯೆ ಹೆಚ್ಚಾಗಿದೆ. ಬಡತನ ಪ್ರಮಾಣ ಕೇರಳದಲ್ಲಿ ಶೇ.7, ತಮಿಳುನಾಡಿನಲ್ಲಿ ಶೇ.9, ಆಂಧ್ರಪ್ರದೇಶದಲ್ಲಿ ಶೇ.11 ಮತ್ತು ರಾಜ್ಯದಲ್ಲಿ ಶೇ.20ಕ್ಕೂ ಹೆಚ್ಚಿದೆ. ಇದರಿಂದ ಮಕ್ಕಳಲ್ಲಿ ಅಪೌಷ್ಟಿಕತೆ ಹೆಚ್ಚಾಗಿದೆ. ಗ್ರಾಮೀಣ ಪ್ರದೇಶದಲ್ಲಿ ಈ ಪ್ರಮಾಣ ಅಧಿಕವಾಗಿದೆ. ಸರಕಾರಿ ಶಾಲೆಯ ವಿದ್ಯಾರ್ಥಿಗಳಿಗೆ ವಾರದಲ್ಲಿ 3 ದಿನ ಹಾಲು ನೀಡುವುದರಿಂದ ಅಪೌಷ್ಟಿಕತೆ ಪ್ರಮಾಣ ನೀಗಿಸಿ, ಹಸಿವು ತೊಲಗಿಸಿದಂತಾಗುತ್ತದೆ,'' ಎಂದರು.

''ದೇವರಿಗೆ ಸಮನಾದ ಮಕ್ಕಳಿಗೆ ಅಮೃತ ಸಮನಾದ ಹಾಲು ನೀಡುವುದು ಐತಿಹಾಸಿಕ ಕಾರ್ಯಕ್ರಮ. ಇಂದಿನಿಂದಲೇ ರಾಜ್ಯದ ಶೇ.90ರಷ್ಟು ಶಾಲೆಗಳಲ್ಲಿ ಯೋಜನೆ ಆರಂಭವಾಗುತ್ತದೆ. ಇಸ್ಕಾನ್ ಮತ್ತು ಅದಮ್ಯ ಚೇತನ ಸಂಸ್ಥೆ ಬಿಸಿಯೂಟ ಪೂರೈಕೆ ಮಾಡುವ ಶಾಲೆಗಳಲ್ಲಿ ಸಮಯಾವಕಾಶ ಕೇಳಿರುವುದರಿಂದ, ಬೆಂಗಳೂರು ನಗರ ಮತ್ತು ಹುಬ್ಬಳ್ಳಿಯ ಶಾಲೆಗಳಲ್ಲಿ 10 ದಿನ ನಂತರ ಆರಂಭವಾಗುತ್ತದೆ. ಮಕ್ಕಳು ಆರೋಗ್ಯವಾಗಿದ್ದರೆ ಅವರ ವಿದ್ಯಾಭ್ಯಾಸವೂ ಉತ್ತಮವಾಗಿರುತ್ತದೆ,'' ಎಂದು ಹೇಳಿದರು.

''ಸದ್ಯ ಹಾಲಿನ ಪುಡಿ ವಿತರಣೆ ಮಾಡಲಾಗುತ್ತದೆ. ಮುಂದಿನ ದಿನಗಳಲ್ಲಿ ಫ್ಲೆಕ್ಸಿ ಪ್ಯಾಕ್‌ಗಳಲ್ಲಿ ಸುವಾಸಿತ ಹಾಲನ್ನೇ ಸರಬರಾಜು ಮಾಡಲಾಗುವುದು. ಯೋಜನೆಯಿಂದ ಸರಕಾರಕ್ಕೆ ವಾರ್ಷಿಕ 400 ಕೋಟಿ ರೂ. ವೆಚ್ಚವಾಗುತ್ತದೆ. ಪ್ರತಿ ದಿನ 7 ಲಕ್ಷ ಲೀ. ಹಾಲು ವಿಲೇವಾರಿ ಮಾಡಿದಂತಾಗುತ್ತದೆ. ಹಾಲಿನ ಪುಡಿಗೆ ವಿಧಿಸುತ್ತಿರುವ ಶೇ.5.5 ತೆರಿಗೆಗೆ ರಿಯಾಯಿತಿ ನೀಡಬೇಕು ಎಂದು ಕೇಳಿದ್ದಾರೆ. ಈಗಷ್ಟೇ ಬಜೆಟ್ ಮುಗಿದಿದೆ. ಈ ಬಗ್ಗೆ ಪರಿಶೀಲಿಸಿ, ತೀರ್ಮಾನ ತೆಗೆದುಕೊಳ್ಳಲಾಗುವುದು,'' ಎಂದು ಹೇಳಿದರು.

ಕೆಎಂಎಫ್ ಅಧ್ಯಕ್ಷ ಜಿ.ಸೋಮಶೇಖರ ರೆಡ್ಡಿ, ''ಕ್ಷೀರಭಾಗ್ಯ ಯೋಜನೆಯಿಂದ ಕೆಎಂಎಫ್‌ಗೆ ನೆರವಾಗುತ್ತದೆ. ಸರಕಾರ 180-200 ಕೋಟಿ ರೂ. ನೆರವು ನೀಡಿದರೆ ಫ್ಲೆಕ್ಸಿ ಪ್ಯಾಕ್‌ನಲ್ಲಿ ಹಾಲು ವಿತರಿಸಬಹುದು,'' ಎಂದು ಹೇಳಿದರು.

ಶಾಸಕ ಎನ್.ನಾಗರಾಜ್, ''ಹೊಸಕೋಟೆ ವಿಧಾನಸೌಧಕ್ಕೆ 14 ಕಿ.ಮೀ ಅಂತರದಲ್ಲಿದ್ದರೂ, ಇಲ್ಲಿ ಸಾಕಷ್ಟು ಸಮಸ್ಯೆಗಳಿವೆ. ಸರಕಾರ ಅಭಿವೃದ್ಧಿಗೆ ನೆರವಾಗಬೇಕು,'' ಎಂದು ಮನವಿ ಮಾಡಿದರು.

ಸಚಿವರಾದ ಟಿ.ಬಿ. ಜಯಚಂದ್ರ, ಎಚ್.ಎಸ್.ಮಹಾದೇವಪ್ರಸಾದ್, ಕಿಮ್ಮನೆ ರತ್ನಾಕರ, ಉಮಾಶ್ರೀ, ಕೃಷ್ಣಬೈರೇಗೌಡ, ಶಾಸಕರಾದ ಬೈರತಿ ಬಸವರಾಜ್, ಶಿವಣ್ಣ, ಬೆಂಗಳೂರು ಹಾಲು ಒಕ್ಕೂಟ ಅಧ್ಯಕ್ಷ ಸಿ.ಮಂಜುನಾಥ್, ಬೆಂಗಳೂರು ಗ್ರಾಮಾಂತರ ಜಿ.ಪಂ. ಅಧ್ಯಕ್ಷ ತಿರುವರಂಗ ವಿ.ನಾರಾಯಣಸ್ವಾಮಿ ಮತ್ತಿತರರು ಉಪಸ್ಥಿತರಿದ್ದರು.
ಲೇಖನಕ್ಕೆ ಅನಿಸಿಕೆಗಳಿವೆ.ಬೇರೆ ಓದುಗರ ಅನಿಸಿಕೆಗಳನ್ನು ಓದಿಮತ್ತುನಿಮ್ಮ  ಅನಿಸಿಕೆಗಳನ್ನು ಬರೆಯಿರಿ.
ಇವುಗಳೂ ನಿಮಗಿಷ್ಟವಾಗಬಹುದು
 
ಇದನ್ನು ಟ್ವೀಟ್ ಮಾಡಿ
About Us | Advertise with Us | Careers @ TIL | Terms of Use and Grievance Redressal Policy | Privacy Policy | Sitemap
Copyright © 2013 Times Internet Limited. All rights reserved. For reprint rights: Times Syndication Service
This site is best viewed with Internet Explorer 7.0 or higher; Firefox 2.0 or higher at a minimum screen resolution of 1024x768