* ಎಂ ಜಿ ಶಿವಲೀಲಾ ದಾಸ್
ಬೆಳಿಗ್ಗೆ ಎದ್ದರೆ ಸುಪ್ರಭಾತ, ಮಗುವಿನ ಅಳು, ಹಾಲಿನವನ ಕೂಗು, ಪೇಪರ್ನವನ ಕರೆ, ನೀರಿನ ನಲ್ಲಿಯ ಬಳಿ ಕೊಡಗಳ ಶಬ್ದ..... ಇವೆಲ್ಲವನ್ನೂ ಇಷ್ಟವಿದ್ದರೂ ಸರಿ, ಇಷ್ಟವಿಲ್ಲದಿದ್ದರೂ ಸರಿ, ಕೇಳಿಸಿಕೊಳ್ಳಲೇಬೇಕು. ವಿಚಿತ್ರವೆಂದರೆ, ನಮ್ಮದೇ ಮಾತನ್ನು ಕೇಳಿಸಿಕೊಳ್ಳುವ ಮಾನಸಿಕ ಸ್ಥಿತಿ ನಮಗಿಲ್ಲ. ಇನ್ನು ಅಂತರಂಗದ ದನಿ ಕೇಳಿಸಿಕೊಳ್ಳುವ ಪುರುಸೊತ್ತೆಲ್ಲಿದೆ? ಸದಾ ಯಾಂತ್ರಿಕವಾಗಿ ಬದುಕಲು ಹಪಹಪಿಸುತ್ತಿರುವ ಜೀವನ ಪಯಣದಲಿ ಜೀವಂತಿಕೆಯ ಪ್ರೀತಿ ಬೆಳೆಸಿಕೊಳ್ಳಬೇಕಿದೆ.
ಮನೆಯಲ್ಲಿ, ಕಚೇರಿಯಲ್ಲಿ ಸಹೋದ್ಯೋಗಿಗಳ ಮಾತಿಗೆ ಮನ್ನಣೆ ಕೊಡದಿದ್ದರೂ ಕೇಳಿಸಿಕೊಂಡು ಪ್ರತಿಕ್ರಿಯಿಸುವ ಮನಸ್ಸಿಗೇಕೆ ನಮ್ಮ ಮನದಾಳದ ಮಾತು ಕೇಳುತ್ತಿಲ್ಲ? ಜೀವನದಲ್ಲಿ ಬರುವ ಕಹಿ ಘಟನೆಗಳನ್ನು ಮರೆತು, ಸಕಾರಾತ್ಮಕ ಚಿಂತನೆಗಳಿಂದ ಬದುಕು ಬದಲಾಗಬೇಕಿದೆ. ಮಧುರ ಖುಷಿಯ ಕ್ಷಣಗಳಿಗಾಗಿ ಬದುಕು ಬಂದಂತೆ ಸ್ವೀಕರಿಸಲು ಕೆಲವೊಂದು ಅಂಶಗಳನ್ನು ಪಾಲಿಸಲೇಬೇಕಿದೆ.
ಸಂಜೆಯಲ್ಲಿ ಆಕಾಶದೆಡೆ ಸುಮ್ಮನೆ ಒಮ್ಮೆ ಮುಖ ಮಾಡಿ ಸ್ವಚ್ಛಂದವಾಗಿ ಹಾರುವ ಹಕ್ಕಿಗಳ ಕೂಗಿಗೆ ದನಿಯಾಗಿ, ಓಡುತ್ತಿರುವ ಮೋಡಗಳ ಪ್ರಶ್ನೆಗೆ ಮೌನವಾಗೋಣ. ಸಂಜೆಯ ಸೂರ್ಯನಿಗೊಂದು ವಿದಾಯ ಹೇಳಿ ಮುಗುಳ್ನಗೋಣ. ಭರವಸೆಯ ಮತ್ತೊಂದು ಸೂರ್ಯೋದಯಕ್ಕೆ ಸಾಕ್ಷಿಯಾಗೋಣ.
* ನಮಗೆ ನೋವುಂಟು ಮಾಡುವವರನ್ನು ಮರೆತು ಬಿಡದಿದ್ದರೆ ಆ ವ್ಯಕ್ತಿ ಸದಾ ನಮ್ಮ ಮನಸ್ಸಿನಲ್ಲಿ ವಾಸ್ತವ್ಯ ಹೂಡಿಬಿಡುತ್ತಾನೆ. ಅದಕ್ಕೆ ಮನ್ನಿಸೋ ಗುಣ ಬೆಳೆಸಿಕೊಳ್ಳಬೇಕು.
* ರೋಗರಹಿತ ಶರೀರ ನಮ್ಮದಾಗಬೇಕಾದರೆ, ನಮ್ಮ ಆಲೋಚನೆ ಸದಾ ಸಕಾರಾತ್ಮಕವಾಗಿರಬೇಕು.
* ಬೇರೆಯವರಿಂದ ನಮಗೆ ನೋವುಂಟಾಗುವುದು ಸಹಜ. ಇದಕ್ಕಾಗಿ ಬೇಸರಿಸಿಕೊಳ್ಳಬಾರದು. ಏಕೆಂದರೆ ಸಿಹಿಯಾದ ಹಣ್ಣುಗಳಿಗೆ ಗರಿಷ್ಠ ಏಟು ಎನ್ನುವುದನ್ನು ನೆನಪಿನಲ್ಲಿಟ್ಟುಕೊಳ್ಳಬೇಕು.
* ನಾವು ಬೆಳೆಯಲು ನೋವೂ ಬೇಕು, ಸೋಲೂ ಬೇಕು!
* ವಯಸ್ಸಾಗುವುದು ಬದುಕಿನಲ್ಲಿ ಉತ್ಸಾಹ, ನೆಮ್ಮದಿ ಕಳೆದುಕೊಂಡಾಗ. ಆದ್ದರಿಂದ ಸದಾ ಹಸನ್ಮುಖಿಗಳಾಗಿ ಇರೋಣ.
* ಇಬ್ಬರ ಮಧ್ಯೆ ಭಿನ್ನಾಭಿಪ್ರಾಯಗಳು ಸಹಜ. ಅದಕ್ಕೇ ಅದನ್ನು ಅಲ್ಲಿಯೇ ಮರೆತು ಬಿಡೋಣ.
* ಅನಿವಾರ್ಯದ ಬದುಕು ನಮ್ಮದಾಗಬಾರದು, ಕ್ರಿಯಾಶೀಲರಾಗಿ ಬದುಕಬೇಕು.
* ಕೆಳಗೆ ಬೀಳುವುದು ತಪ್ಪಲ್ಲ. ಆದರೆ ಪದೇಪದೇ ತಪ್ಪುಗಳನ್ನು ಮಾಡುವಷ್ಟು ಜೀವನ ಸುದೀರ್ಘವಾಗಿಲ್ಲ.